ಉಡುಪಿ,ಜ.22; ಮಾನಸಿಕ ರೋಗದ ಜೊತೆಯಲ್ಲಿ ದೈಹಿಕ ರೋಗದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಅಪರಿಚಿತ ರೋಗಿಯನ್ನು ಗುಣಪಡಿಸಿ, ಸಂಬಂಧಿಕರಿಗೆ ಹಸ್ತಾಂತರಿಸಿರುವ ಮಾನವೀಯ ಸೇವಾಕಾರ್ಯವು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ನಡೆದಿದೆ.
ಆದರ್ಶ್ ಆಸ್ಪತ್ರೆ ಹಾಗೂ ದೊಡ್ಡಣಗುಡ್ಡೆ ಡಾ ಎ ವಿ ಬಾಳಿಗ ಆಸ್ಪತ್ರೆಯು ರೋಗಿಗೆ ಉಚಿತ ಚಿಕಿತ್ಸೆ ಒದಗಿಸಿ ಮಾನವಿಯತೆ ಮೆರೆದಿವೆ. ಆಸ್ಪತ್ರೆಯ ಸೇವಾಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ನಗರ ಪೊಲೀಸ್ ಠಾಣಾಧಿಕಾರಿ ಈ ಶಕ್ತಿವೇಲು, ಹಾಗೂ ಆದರ್ಶ ಆಸ್ಪತ್ರೆಯ ಮೇಲ್ವಿಚಾರಕ ಸಂತೋಷ್ ಶೆಟ್ಟಿ ಅಪರಿಚಿತ ರೋಗಿ ತಮಿಳುನಾಡು ಮೂಲದ ವೇಣು ಮುರುಗನ್ ಎಂದು ವಿಳಾಸ ಪತ್ತೆಗೊಳಿಸಿ, ಸಂಬಂಧಿಕರಿಗೆ ವಿಷಯ ಮುಟ್ಟಿಸಿದರು.
ಕಳೆದ ಜ.7, ರಂದು ಅಜ್ಜರಕಾಡು ಪರಿಸರದಲ್ಲಿ ಸಾರ್ವಜನಿಕರ ಮೇಲೆ ವಿನಾಕರಣ ಹಲ್ಲೆ ನಡೆಸುತ್ತ, ಬಾಟಲಿಗಳನ್ನು ಏಸೆಯುತ್ತ ಭಯದ ವಾತಾವರಣ ಸೃಷ್ಟಿಸಿದ ಮನೋರೋಗಿಯನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು, ಪೊಲೀಸರ ಸಹಾಯದಿಂದ ವಶಕ್ಕೆ ಪಡೆದಿದ್ದರು. ರೋಗಿಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಿದರು. ರೋಗಿಯ ಉಗ್ರ ವರ್ತನೆಗೆ ತಡೆಯೊಡ್ಡಲು, ಮಂಪರು ಚುಚ್ಚು ಮದ್ದು ನೀಡಿ, ಅಲ್ಲಿಂದ ವಿಶು ಶೆಟ್ಟಿ ಅವರು, ಹೆಚ್ಚಿನ ಚಿಕಿತ್ಸೆ ಒದಗಿಸಲು ದೊಡ್ಡಣಗುಡ್ಠೆ ಡಾ ಎ, ವಿ ಬಾಳಿಗ ಆಸ್ಪತ್ರೆಗೆ ದಾಖಲುಪಡಿಸಿದ್ದರು.
ರೋಗಿಯು ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಚೇತರಿಕೆ ಕಂಡು ಸಹಜಸ್ಥಿತಿಗೆ ಬಂದಿದ್ದನು. ನಂತರದಲ್ಲಿ ಈ ಮೊದಲೇ ರೋಗಿಯ ಮೂತ್ರ ಪಿಂಡಗಳು ವೈಫಲ್ಯ ಹೊಂದಿರುವುದು ಕಂಡುಬಂದಿದೆ. ರೋಗಿಯ ಗಂಭೀರ ಪರಿಸ್ಥಿತಿಯನ್ನು ವೈದ್ಯರ ಮೂಲಕ ಅರಿತು, ವಿಶು ಶೆಟ್ಟಿ ಅವರು, ತಕ್ಷಣ ನಗರದ ಆದರ್ಶ್ ಆಸ್ಪತ್ರೆಗೆ ದಾಖಲುಪಡಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ. ಆದರ್ಶ ಆಸ್ಪತ್ರೆ ವೈದ್ಯರು 45 ಸಾವಿರ ಚಿಕಿತ್ಸಾ ವೆಚ್ಚದಲ್ಲಿ 30 ಸಾವಿರವನ್ನು ಉಚಿತಗೊಳಿಸಿದ್ದಾರೆ.
ಹಾಗೂ ಬಾಳಿಗ ಆಸ್ಪತ್ರೆಯ ವೈದ್ಯರು ರೋಗಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಎರಡು ಖಾಸಗಿ ಆಸ್ಪತ್ರೆಗಳು ಬಡರೋಗಿಯ ಚಿಕಿತ್ಸೆಗೆ ಸಹಕರಿಸಿ ಮಾನವಿಯತೆ ಮೆರೆದಿವೆ. ರೋಗಿಗೆ ತಗುಲಿದ ಔಷಧೋಪಚಾರದ ಖರ್ಚು 15 ಸಾವಿರ ರೂಪಾಯಿಯನ್ನು ವಿಶು ಶೆಟ್ಟಿ ಅವರು ಭರಿಸಿದ್ದಾರೆ.
ನನ್ನ ಸಹೋದರ ಮಣಿಪಾಲದ ಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಆಕಸ್ಮಿಕವಾಗಿ ಆತನ ಆರೋಗ್ಯ ಹದಗೆಟ್ಟು ಗಂಭೀರ ಸ್ಥಿತಿಗೆ ಬಂದಿತು. ಯಾರೂ ಸಹಾಯ ಮಾಡಲು ಮುಂದೆ ಬಾರದ ಸಮಯದಲ್ಲಿ ವಿಶು ಶೆಟ್ಟಿ ಅವರು ತಕ್ಷಣವಾಗಿ ಸಹೋದರನ ಪ್ರಾಣ ರಕ್ಷಿಸಿ ಜೀವಂತವಾಗಿ ನಮಗೆ ಒಪ್ಪಿಸಿದ್ದಾರೆ. ಅವರ ಸಹಕಾರ ದೊರೆಯದೆ ಇದ್ದಲ್ಲಿ ಸಹೋದರನು ಬದುಕುಳಿಯುತ್ತಿರಲಿಲ್ಲ, ಎನ್ನುವ ವಿಚಾರವು ವೈದ್ಯರು ಮತ್ತು ಪೋಲಿಸರಿಂದ ತಿಳಿದುಬಂದಿತು. ವಿಶು ಶೆಟ್ಟಿ ಅವರ ಅನನ್ಯ ಸೇವೆಗೆ ನಾವು ಚಿರಋಣಿಯಾಗಿದ್ದೇವೆ.