ಭಟ್ಕಳ(ಜ.25):ಭಟ್ಕಳದಲ್ಲಿ ಮಹಿಳೆಯೊಬ್ಬಳಿಗೆ ತಲೆ ಮೇಲೆ ಹೊಡೆದಿದ್ದಲ್ಲದೆ ಅವರ ಸೀರೆಯನ್ನೇ ಕೊರಳಿಗೆ ಬಿಗಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಕೊಪ್ಪದ ಕೊಂಕಣತಿಬೈಲ್ನಲ್ಲಿ ನಡೆದಿದೆ.
ಕೊಲೆಯಾದವರನ್ನು ಉತ್ತರಕೊಪ್ಪದ ಕೊಂಕಣತಿಬೈಲ್ ನಿವಾಸಿ ಲಕ್ಷ್ಮೀ ಕೃಷ್ಣಾ ನಾಯ್ಕ(45) ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಅವರು ಮನೆಯಲ್ಲಿ ಒಬ್ಬಳೇ ಇದ್ದಾಗ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಮಹಿಳೆಯ ಕೈಗೆ ಸುಟ್ಟಗಾಯವಾಗಿದ್ದು, ತಲೆಯ ಹಿಂಭಾಗಕ್ಕೆ ಮಾರಕಾಯುಧದಿಂದ ಬಲವಾಗಿ ಹೊಡೆದಿರುವುದು ಮತ್ತು ಕುತ್ತಿಗೆಗೆ ಬಿಗಿದಿರುವುದು ಕಂಡುಬಂದಿದೆ. ಇವರಿಗೂ ಮತ್ತು ಕೆಲವರಿಗೆ ಇತ್ತೀಚೆಗೆ ದಾರಿಯಲ್ಲಿ ಮರದ ಕೊಂಬೆ ಬಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಆಗಿದೆ ಎನ್ನಲಾಗಿದ್ದು, ಕೊಲೆಗೆ ಈ ಘಟನೆ ಕಾರಣವೇ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.
ಕೊಲೆಗೀಡಾದ ಮಹಿಳೆಯ ಪುತ್ರ ಗಣಪತಿ ನಾಯ್ಕ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.